ಚಕ್ರವರ್ತಿ ಚಂದ್ರಚೂಡ್ ಕನ್ನಡದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪ್ರಸ್ತುತ ಲಂಕೇಶ್ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಹಾಗೂ ಸಿನೆಮಾರಂಗದ ವಿವಿಧ ಭಾಗಗಳಲ್ಲಿ ಸಕ್ರಿಯರಾಗಿದ್ದಾರೆ. ಮೂಲತಃ ಸಾಮಾಜಿಕ ಚಳವಳಿಗಳ ಹಿನ್ನೆಲೆಯಿಂದ ಬಂದ ಇವರು ಪ್ರಸ್ತುತ `ದರ್ವೇಶ್ ಚೌಕಿ: ಬೇರುಗಳ ಸರಪಳಿ' ಸಂಸ್ಥೆಯ ಮೂಲಕ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ `ದಾದಾ' ಎಂದೇ ಪರಿಚಿತರು. == ಜೀವನ == ಚಕ್ರವರ್ತಿ ಚಂದ್ರಚೂಡ್ ಜನಿಸಿದ್ದು 1977ರ ಆಗಸ್ಟ್ 15ರಂದು. ಲಕ್ಷ್ಮೀಶ ಕವಿ ಜೈಮಿನಿ ಭಾರತ ಬರೆದ ಸ್ಥಳವೆಂದು ಹೇಳಲಾಗುವ ಚಿಕ್ಕಮಗಳೂರಿನ ದ್ಯಾವನೂರಿನ ದೇಗುಲ ಮಂಟಪದಲ್ಲಿ ಜನನ. ಪ್ರಾಥಮಿಕ ಶಿಕ್ಷಣವನ್ನು ಹಾಸನ ಜಿಲ್ಲೆಯ ವಿವಿಧ ಭಾಗಗಳಲ್ಲಿ ಪೂರೈಸಿದ ಇವರು, ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ ಪದವಿಯನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಮನಃಶ್ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದ ಚಕ್ರವರ್ತಿ, , ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ಕೆರೆ ನಿರ್ಮಾಣ, ಜಲ ಅಧ್ಯಯನ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಇದೀಗ 'ದರ್ವೇಶ್ ಚೌಕಿ' ಸಂಘಟನೆಯ ಮೂಲಕ ಈ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಹದಿನೈದು ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಹಾಗೂ ಪತ್ರಕರ್ತರಾಗಿ ಕೆಲಸ ಮಾಡಿದ ಚಕ್ರವರ್ತಿಯವರು ಹಲವು ವರ್ಷಗಳಿಂದ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. == ಚಳವಳಿ ಮತ್ತು ಸಾಹಿತ್ಯ == ಮೊದಲ ಪುಸ್ತಕ 'ಜಲ ಜನ ಕ್ರಾಂತಿ' ಬಿಡುಗಡೆಯಾಗಿದ್ದು 2002ರಲ್ಲಿ. ಅಣ್ಣಾ ಹಜಾರೆ ನೆಲೆಸಿದ್ದ ರಾಣೆಗಂಜ್ ಸಿದ್ದಿ ಮತ್ತು ರಾಜಿಂದರ್ ಸಿಂಗ್ರ ಭೀಕಮ್ಪುರ್ ಕಿಶೋರಿಗೆ ಭೇಟಿ ನೀಡಿ, ಅಲ್ಲಿಯ ಜಲ ಕ್ರಾಂತಿಯ ಅಧ್ಯಯನ ನಡೆಸಿ ರಚಿಸಿದ್ದ ಈ ಪುಸ್ತಕವನ್ನು ಹಾಸನ ಬಳಿಯ ಚನ್ನಪಟ್ಟಣದ ಖಾಲಿ ಕೆರೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜ್ಯಕ್ಕೆ ಮೊದಲ ಬಾರಿಗೆ ರಾಜಿಂದರ್ ಸಿಂಗ್ ಹಾಗೂ ಅಣ್ಣಾ ಹಜಾರೆಯವರನ್ನು ಅಧಿಕೃತವಾಗಿ ಪರಿಚಯಿಸಿದ್ದ ಈ ಪುಸ್ತಕವು ತನ್ನ ಆಶಯದಿಂದಾಗಿ ಜನ ಮೆಚ್ಚುಗೆಯನ್ನು, ಹಲವು ಸನ್ಮಾನಗಳನ್ನು ಪಡೆದಿತ್ತು. ಚಕ್ರವರ್ತಿ ಚಂದ್ರಚೂಡ್ರ ಅವರ ಎರಡನೆ ಕೃತಿ 'ಖಾಲಿ ಶಿಲುಬೆ (ಪಾಪಿಯೊಬ್ಬನ ಪ್ರೇಮ ಪದ್ಯಗಳು)' ಕವನ ಸಂಕಲನ 2014ರಲ್ಲಿ ಬಿಡುಗಡೆಗೊಂಡಿದ್ದು, ಅಲ್ಪಾವಧಿಯಲ್ಲೆ ಪುನರ್ಮುದ್ರಣಕ್ಕೆ ಸಜ್ಜಾದ ಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಮಶಾನದಲ್ಲಿ ಬಿಡುಗಡೆಗೊಂಡ ಈ ಕೃತಿಯು ತನ್ನ ವಿಭಿನ್ನ ರಚನಾಶೈಲಿ ಹಾಗೂ ಅಪರೂಪ ಹಾಗೂ ಅಷ್ಟೇ ವಿಚಿತ್ರವಾದ ಬಿಡುಗಡೆ ಕಾರ್ಯಕ್ರಮಗಳಿಂದಾಗಿ ಸಾಕಷ್ಟು ಸುದ್ದಿಯಾಗಿತ್ತು. ಈವರೆಗಿನಂತೆ ಚಕ್ರವರ್ತಿಯವರ ಮತ್ತೆರಡು ಕವನ ಸಂಕಲನಗಳಾದ 'ಸಾವ ಕೊಲ್ಲುವವರಿಗೆ ಶಿಕ್ಷೆ ಇಲ್ಲ' ಮತ್ತು `ಮೈಲುತುತ್ತ' ಬಿಡುಗಡೆಗೆ ಸಿದ್ಧವಾಗಿದೆ. == ಸಿನೆಮಾ == ಕಳೆದ ಹತ್ತು ವರ್ಷಗಳಿಂದ ಸಿನೆಮಾರಂಗದಲ್ಲಿ ತೊಡಗಿಕೊಂಡಿರುವ ಚಕ್ರವರ್ತಿಯವರ ನಿರ್ದೇಶನದ ಮೊದಲ ಸಿನೆಮಾ 'ಜನ್ಮ' 2013ರಲ್ಲಿ ತೆರೆ ಕಂಡಿತ್ತು. ಆನೇಕಲ್ ಬಾಲ್ರಾಜ್ ನಿರ್ಮಿಸಿದ ಈ ಸಿನೆಮಾವು ಕಾವೇರಿ ಜಲ ವಿವಾದ, ಡಾ.ರಾಜ್ ಕುಮಾರ್ ಪ್ರಕರಣ ಹಾಗೂ ನಿಧನ ಸಂಗತಿಗಳನ್ನು ಆಧರಿಸಿದ ಕರ್ನಾಟಕ - ತಮಿಳುನಾಡು ಪ್ರದೇಶದ ನಾಯಕ - ನಾಯಕಿಯ ಪ್ರೇಮ ಕಥನವನ್ನು ಒಳಗೊಂಡಿತ್ತು. 'ಜನ್ಮ' ತನ್ನ ನಿರೂಪಣೆ ಹಾಗೂ ಕಥೆಯಿಂದಾಗಿ ವಿಮರ್ಶಕರ ಮೆಚ್ಚುಗೆ ಪಡೆದ ಸಿನೆಮಾ. ಸಿತಾರಾ, ತಲೈವಸಲ್ ವಿಜಿ, ಸಂತೋಷ್, ಅನುರಾಧಾ, ಬುಲೆಟ್ ಪ್ರಕಾಶ್ ಮೊದಲಾದವರು ಈ ಸಿನೆಮಾದಲ್ಲಿ ನಟಿಸಿದ್ದರು. ಪ್ರಸ್ತುತ ಚಕ್ರವರ್ತಿ ಚಂದ್ರಚೂಡ್ ಹಲವು ಸಿನೆಮಾಗಳಿಗೆ ಕಥೆ, ಚಿತ್ರ ಕಥೆ, ಸಂಭಾಷಣೆ ಹಾಗೂ ಹಾಡುಗಳ ಬರಹದಲ್ಲಿ ತೊಡಗಿಕೊಂಡಿದ್ದಾರೆ. ತಮಿಳು ಚಿತ್ರ ಕಥೆಯಲ್ಲೂ ಕೈಯಾಡಿಸಿದ ಅನುಭವ ಇರುವ ಚಕ್ರವರ್ತಿ ಕಾಲಿವುಡ್ನಲ್ಲೂ ಸಕ್ರಿಯವಾಗಿದ್ದಾರೆ. ಸದ್ಯಕ್ಕೆ 'ರಾವಣಿ' ಚಲನಚಿತ್ರದಲ್ಲಿ ತೊಡಗಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, ಕಳಸಾಬಂಡೂರಿ ಯೋಜನೆ ಕುರಿತಂತೆ 'ಮಹಾಮರಣ' ಎನ್ನುವ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. == ಆಸಕ್ತಿಗಳು == ಬಹುಮುಖ ಬದುಕು, ಚಿಂತನೆ ಹಾಗೂ ಆಸಕ್ತಿಗಳ ಚಕ್ರವರ್ತಿ ಚಂದ್ರಚೂಡ್ ಗೀತ ರಚನೆಕಾರರೂ ಆಗಿದ್ದಾರೆ. ಸ್ವತಃ ಹಾಡುತ್ತಾರೆ ಕೂಡ. ಕಥೆ, ಕವಿತೆಗಳನ್ನು ಬರೆಯುತ್ತಾರೆ. ಸಿನೆಮಾ, ರಂಗಭೂಮಿ ಹಾಗೂ ಸಂಗೀತಾಸ್ವಾದನೆ ಇವರ ಮೆಚ್ಚಿನ ಹವ್ಯಾಸಗಳು. == ==